ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಸರ್ವರ ಸಹಭಾಗಿತ್ವ ಅಗತ್ಯ-ಶಿವಪೂಜೆ
ಪ್ಲಾಸ್ಟಿಕ್ ನಿಷೇಧ ವ್ಯಾಪಾರಸ್ಥರ ಸಭೆ
ಯಾದಗಿರಿ, ಶಹಾಪುರಃ ಪರಸ್ಪರ ಸಹಕಾರಗಳಿಂದ ಸರ್ಕಾರದ ಕಾರ್ಯ ಯೋಜನೆಗಳು ಅನುಷ್ಠಾನಗೊಳಿಸಲು ವ್ಯಾಪಾರಸ್ಥರು ಅಂಗಡಿ ಮಾಲೀಕರು ಮುಕ್ತ ಮನಸ್ಸಿನನಿಂದ ಭಾಗಿಗಳಾಗಿ, ಪ್ಲಾಸ್ಟಿಕ್ ನಿಷೇಧ ಕಾಯ್ದೆ ಅನುಸಾರ ಪ್ಲಾಸ್ಟಿಕ್ ನಿಷೇಧತ್ತ ಹೆಜ್ಜೆ ಹಾಕುವ ಮೂಲಕ ಕಾನೂನನ್ನು ಗೌರವಿಸಬೇಕು ಎಂದು ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ ಹೇಳಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ವ್ಯಾಪಾರಸ್ಥರ ಹಾಗೂ ಅಂಗಡಿ ಮುಗ್ಗಟ್ಟುಗಳ ಮಾಲೀಕರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಾರಣ ಸರ್ಕಾರ ಜನರ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಕಾರ್ಯಯೋಜನೆ ರೂಪಿಸಿದೆ. ನಾಗರಿಕರು ಈ ಕುರಿತು ಜಾಗೃತಿ ಹೊಂದಬೇಕಿದೆ. ಆ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ರೂಪಿಸಲು ಸರ್ವರ ಸಹಕಾರ ಸಹಭಾಗಿತ್ವ ಅಗತ್ಯವಿದೆ ಎಂದರು.
ಪರಿಸರ ಇಂಜೀನಿಯರ್ ಹರೀಶ ಸಜ್ಜನ ಶೆಟ್ಟಿ ಮಾತನಾಡಿ, ಈಗಾಗಲೇ ಹಲವಾರು ಬಾರಿ ವಿವಿಧ ವಾರ್ಡಗಳಲ್ಲಿ ಪ್ಲಾಸ್ಟಿಕ್ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅಲ್ಲದೆ ಪ್ರತಿ ದಿನ ಮನೆ ಮನೆಗೆ ತ್ಯಾಜ್ಯ ಸಂಗ್ರಹ ವಾಹನದಲ್ಲಿಯೂ ಪ್ಲಾಸ್ಟಿಕ್ ನಿಷೇಧ ಕುರಿತು ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಆಡಿಯೋ ಮೂಲಕ ಪ್ರಚಾರಕೈಗೊಳ್ಳಲಾಗಿದೆ.
ಕಾರಣ ಪ್ಲಾಸ್ಟಿಕ್ ಬಳಕೆಯಿಂದ ಜನರ ಅದರಲ್ಲೂ ಮಕ್ಕಳ ವೃದ್ಧರ ಮೇಲೆ ಮಾರಣಾಂತಿಕ ಖಾಯಿಲೆಗಳು ಉದ್ಭವವಾಗುತ್ತಿದ್ದು, ಕೂಡಲೇ ಅದರಿಂದ ದೂರ ಉಳಿಯುವದು ಬಳಕೆ ಮಾಡದಂತೆ ಎಚ್ಚರಿಕೆ ವಹಿಸುವದು ಅಗತ್ಯವಿದೆ ಎಂದು ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ನಗರಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಕಿರಾಣಿ ಅಂಗಡಿ ಮಾಲೀಕ ಗುಂಡಪ್ಪ ತುಂಬಗಿ ಸೇರಿದಂತೆ ಇತರೆ ವ್ಯಾಪಾರಸ್ಥರು ಭಾಗವಹಿಸಿದ್ದರು.