ಪ್ರಮುಖ ಸುದ್ದಿ

ಅಲ್ಲಿ ಅಂತ್ಯಕ್ರಿಯೆಗೆ ಹೋದವರಿಗೆ ನರಕ ದರ್ಶನ!

ಇನ್ನಾದರೂ ಇತ್ತ ಗಮನಹರಿಸಿ ಪ್ಲೀಸ್…

ಬೀದರ : ಬಸವ ಕಲ್ಯಾಣ ತಾಲ್ಲೂಕಿನ ಧನ್ನೂರು ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಜನ ಆತಂಕಗೊಳ್ಳುತ್ತಾರೆ. ಇನ್ನು ಮೃತರ ಸಂಬಂಧಿಕರು ಶವಸಂಸ್ಕಾರಕ್ಕೆ ನಮ್ಮೊಂದಿಗೆ ಬಂದು ಹೆಗಲು ಕೊಡುವವರು ಯಾರು ಎಂಬ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ಆ ಗ್ರಾಮದ ಜನರಿಗೆ ಸಾವಿಗಿಂತಲೂ ಹೆಚ್ಚಿನ ನೋವು ನೀಡುವುದು ಶವಸಂಸ್ಕಾರ.

ಹೌದು, ದನ್ನೂರ್ ಗ್ರಾಮಕ್ಕೆ ಸರ್ಕಾರ ಈವರೆಗೆ ಸ್ಮಶಾನ ಭೂಮಿ ಒದಗಿಸಿಲ್ಲ. ಪರಿಣಾಮ ಜನ ಅವರವರ ಜಮೀನು, ಗದ್ದೆಗಳಲ್ಲಿ ಶವಸಂಸ್ಕಾರ ಮಾಡುವ ಅನಿವಾರ್ಯತೆ ಇದೆ. ಆದರೆ, ಜಮೀನುಗಳಿಗೆ ಹೋಗಬೇಕೆಂದರೆ ಚುಳುಕಿನಾಲಾ ಜಲಾಶಯದ ಹಿನ್ನೀರು ದಾಟಿಕೊಂಡು ಹೋಗಬೇಕು. ಸುಮಾರು ಅರ್ಧ ಕಿಲೋ ಮೀಟರ್ ನಷ್ಟು ದೂರ ನೀರಿನಲ್ಲೇ ಸಾಗಬೇಕಿದೆ. ಅದೂ ಎದೆಮಟ್ಟದ ನೀರಿನಲ್ಲಿ ಪಾರ್ಥಿವ ಶರೀರ ಹೊತ್ತು ಸಾಗುವುದೊಂದು ದೊಡ್ಡ ಸಾಹಸವೇ ಸರಿ.

ನಿನ್ನೆ ಗ್ರಾಮದ ಖೈದರ್ ಸಾಬ್ ಎಂಬುವರು ಮೃತಪಟ್ಟಿದ್ದು ನೀರಿನಲ್ಲೇ ಪಾರ್ಥಿವ ಶರೀರ ಹೊತ್ತು ಸಾಗಿದ ಘಟನೆ ನಡೆದಿದೆ. ಆದರೆ, ಮಕ್ಕಳು, ಮಹಿಳೆಯರು, ವೃದ್ಧರು ನೀರಿನಲ್ಲಿ ತೆರಳಲು ಸಾಧ್ಯವಿಲ್ಲ. ಹೀಗಾಗಿ, ಕೆಲ ಸಂಬಂಧಿಕರು ಸಹ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಾಗದ ಸ್ಥಿತಿಯಿದೆ. ಕೆಲವೇ ಕೆಲವು ಯುವಕರು ನೀರಿನಲ್ಲಿ ಎದ್ದು ಬಿದ್ದು, ಮುಳ್ಳು ಕಂಟಿಗಳಿಂದ ಗಾಯಗೊಂಡು ಪಾರ್ಥಿವ ಶರೀರ ಹೊತ್ತು ಸಾಗಿ ಅಂತಿಮ ಸಂಸ್ಕಾರ ನೆರವೇರಿಸಬೇಕಿದೆ. ಹಲವು ದಶಕಗಳಿಂದ ಗ್ರಾಮದ ಜನ ಸ್ಮಶಾನ ಭೂಮಿಗಾಗಿ ಬೇಡಿಕೆ ಇಟ್ಟಿದ್ದಾರಾದರೂ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸಿಲ್ಲ. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸ್ಮಶಾನ ಭೂಮಿ ಒದಗಿಸುವ ಮೂಲಕ ಪುಣ್ಯ ಕಟ್ಟಿಕೊಳ್ಳಲಿ ಎಂದು ಗ್ರಾಮದ ರಫೀಕ್ ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button