ಭಾರತ ಬಂದ್ ಬೆಂಬಲಿಸಿ ರೈತರಿಂದ ಪ್ರತಿಭಟನೆ
ನೂತನ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹ
ತಟ್ಟದ ಬಂದ್ ಬಿಸಿ, ಯಥಾಸ್ಥಿತಿ ವ್ಯಾಪಾರ ವಹಿವಾಟು, ವಾಹನಗಳ ಸಂಚಾರ
yadgiri, ಶಹಾಪುರಃ ನೂತನ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಮಂಗಳವಾರ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಯಶಸ್ವಿ ಕಾಣಲಿಲ್ಲ. ಇಲ್ಲಿನ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ ಕಚೇರಿ ಎದುರು ಪ್ರತಿಭಟಿಸಿ ತಹಶೀಲ್ದಾರರ ಮೂಲಕ ಪ್ರಧಾನಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ಇದರ ಹೊರತಾಗಿ ನಗರದಲ್ಲಿ ಯಾವುದೇ ಪ್ರತಿಭಟನೆ, ಬಂದ್ ನಡೆಯಲಿಲ್ಲ. ಎಂದಿನಂತೆ ವ್ಯಾಪರ ವಹಿವಾಟು ಜೋರಾಗಿ ಇತ್ತು. ವಾಹನ ಸಂಚಾರವು ದಟ್ಟವಾಗಿತ್ತು. ಸರ್ಕಾರಿ ಕಚೇರಿಗಳು ತೆರೆದಿದ್ದವು. ಯಾವುದೇ ಭಾರತ್ ಬಂದ್ ಬಿಸಿ ನಗರದ ಜನತೆಗೆತಟ್ಟಲಿಲ್ಲ.
ವಿವಿಧ ರೈತ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ ನಗರದಲ್ಲಿ ಸಂಪೂರ್ಣ ವಿಫಲವಾಗಿದೆ.
ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಿಂದ ತಹಸೀಲ್ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಖಂಡ ಮಲ್ಲಣ್ಣ ಪರಿವಾಣ ಮಾತನಾಡಿ, ಕೇಂದ್ರ ಸರ್ಕಾರ ಜನಪರ, ರೈತರ ಪರ ಕಾನೂನುಗಳನ್ನು ಜಾರಿಗೊಳಿಸುವ ಬದಲು ರೈತರಿಗೆ ಮರಣ ಶಾಸನವಾಗುವಂತ ಕಾನೂನು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಡಿ ದೇಶ ಹೊಸ ಕೃಷಿ ಕಾಯ್ದೆಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಕೇಂದ್ರ ಸರ್ಕಾರ ಮಾತ್ರ ನಿಷ್ಕಾಳಜಿವಹಿಸುತ್ತಿದೆ. ಕೂಡಲೇ ಪ್ರಧಾನಿಗಳು ಈ ಕುರಿತು ಗಂಭೀರವಾಗಿ ಪರಿಗಣಿಸಿ ನೂತನ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.
ದೆಹಲಿಯಲ್ಲಿ ರೈತರು ನಿರಂತರ ಆಂದೋಲನ ನಡೆಸುತ್ತಿದ್ದಾರೆ. ಅವರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇದು ಘೋರ ಅನ್ಯಾಯ. ನ್ಯಾಯಕ್ಕಾಗಿ ಹೋರಾಟ ನಡೆಸುವ ಮತ್ತು ದೇಶದ ಜನರಿಗೆ ಅನ್ನ ನೀಡುವ ರೈತರ ಮೇಲೆ ಲಾಠಿ ಬೀಸುವದು ಸರಿಯಲ್ಲ. ರೈತರ ಉಸಿರು ತಟ್ಟಿದರೆ ಒಳ್ಳೆಯದಾಗಲ್ಲ ಎಂದರು.
ಕಾರ್ಪೋರೇಟರ್ ಕಂಪನಿಗಳ ಪರವಾಗಿ ಸರ್ಕಾರ ಹೊರಟಿದ್ದು, ರೈತರನ್ನು ವಿರೋಧಿಸುತ್ತಿದೆ. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ನ್ಯಾಯಯುತ ಹೋರಾಟಕ್ಕೆ ಜಯ ದೊರೆಯಲಿದೆ. ಇಲ್ಲವಾದಲ್ಲಿ ಮುಂಬರುವ ದಿನಗಳು ಇನ್ನಷ್ಟು ಉಗ್ರವಾದ ಹೋರಾಟ ಹಾದಿ ಹಿಡಿಯಲಿದೆ ಎಂಬುದನ್ನು ಕೇಂದ್ರ ಸರ್ಕಾರ ಮನಗಾಣಬೇಕಿದೆ. ಕಾರಣ ಕೂಡಲೇ ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಮೂಲಕ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭೀಮರಾಯ ಹುಲ್ಕಲ್, ಲಾಲಸಾಬ ಚೌದರಿ, ತಿಮ್ಮಣ್ಣ ಮುಂದಿನಮನಿ, ಸಂಗನಬಸಪ್ಪ ದಿಗ್ಗಿ, ಭೀಮಾಶಂಕರ ಸಲಾದಪುರ, ನಿಂಗಣ್ಣ ಟಿ.ವಡಿಗೇರಿ ಸೇರಿದಂತೆ ಇತರರು ಭಾಗವಹಿಸಿದ್ದರು.