ಪ್ರಮುಖ ಸುದ್ದಿ

ಶಹಾಪುರಃ ನೀರಿಗಾಗಿ ಖಾಲಿಕೊಡಗಳಿಂದ ಗ್ರಾಪಂಗೆ ಮುತ್ತಿಗೆ

ಸಮರ್ಪಕ ಕುಡಿಯುವ ನೀರೊದಗಿಸಲು ಆಗ್ರಹ
ಶಹಾಪುರಃ ಕುಡಿಯುವ ನೀರಿಗಾಗಿ ಬೇಸತ್ತ ಗ್ರಾಮಸ್ಥರು ಶುಕ್ರವಾರ ಗ್ರಾಪಂ ಕಚೇರಿಗೆ ಖಾಲಿಕೊಡಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ತಾಲೂಕಿನ ಹತ್ತಿಗುಡೂರ ಗ್ರಾಮದಲ್ಲಿ ನಡೆದಿದೆ.

ಕಳೆದ ಮೂರು ತಿಂಗಳಿಂದಲೂ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಗ್ರಾಮದಲ್ಲಿ ದಿನ ಬೆಳಗಾದರೆ ಹನಿ ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಗ್ರಾಮದಲ್ಲಿ ಯಾವುದೇ ಕೊಳವೆ ಬಾವಿ ಕೊರೆದರೂ ಸಂಪೂರ್ಣ ಉಪ್ಪು ನೀರು ಬರುತ್ತಿವೆ. ಕೊಳವೆ ಬಾವಿಯಲ್ಲಿ ಬರುವ ನೀರು ಕುಡಿಯಲು ಯೋಗ್ಯವಿಲ್ಲ. ಇನ್ನೊಂದಡೆ ವಿಭೂತಿಹಳ್ಳಿ ಗ್ರಾಮ ವ್ಯಾಪ್ತಿಯ ಪ್ರದೇಶದಿಂದ ಕೊಳವೆ ಬಾವಿ ಕೊರೆದು ಪೈಪ್ ಲೈನ್ ಮಾಡಿಸಿ ನೀರು ಸರಬರಾಜು ಮಾಡಲಾಗಿತ್ತು. ಕನಿಷ್ಟ ಎರಡು ಮೂರು ದಿನಗಳಿಗೊಮ್ಮೆ ನೀರು ಬರುತಿತ್ತು. ಆದರೆ ಆ ಮೂಲಕವು ಇದೀಗ ನೀರು ಸ್ಥಗಿತಗೊಂಡಿದೆ.

ಹೀಗಾಗಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ. ಸಾಕಷ್ಟು ಬಾರಿ ಜನಪ್ರತಿನಿಧಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ತಾತ್ಕಾಲಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಇಲ್ಲವಾದಲ್ಲಿ ಪ್ರತಿಭಟನೆ ಆಹೋರಾತ್ರಿ ಮುಂದುವರೆಸುತ್ತೇವೆ ಎಂದು ಪಟ್ಟು ಹಿಡಿದರು. ಸಮರ್ಪ ವ್ಯವಸ್ಥೆ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಗ್ರಾಪಂ ಕಚೇರಿಗೆ ಮುಳ್ಳು ಬಡೆದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಆಗ ಗ್ರಾಪಂ ಅಭಿವೃದ್ಧಿ ಅಧಿಕಾರಿ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು ಎಂದು ಮುಖಂಡ ಶರಣರಡ್ಡಿ ಹತ್ತಿಗುಡೂರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ತಿಪ್ಪಣ್ಣ ಘಂಟಿ, ಶೇಖಪ್ಪ ಹೊಸಮನಿ, ಬಾಗಪ್ಪ ರತ್ತಾಳ ರಾಜಪ್ಪ ಹೊಸಮನಿ, ಮಲ್ಲಪ್ಪ ಕನಕಗಿರಿ, ಸುಭಾಶ ಕನ್ಯಾಕೋಳೂರ, ಶರಣಪ್ಪ ಗ್ಯಾಂಗೀನ, ಮಲ್ಲಪ್ಪ ಗೌಂಡಿ, ಮಾನಪ್ಪ ಯರಗಲ್, ದೇವಪ್ಪ ರತ್ತಾಳ, ಹೊನ್ನಪ್ಪ, ರವಿ ಕನಕಗಿರಿ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button