ಕಾವ್ಯ

ಎ.ಕೃಷ್ಣ & ರುಮಾಲ ಅವರಿಗೆ ಹೂಬೊಗಸೆ ನಮನ ದವನ

ದಿ.12.07.2020ರವಿವಾರದಂದು ನಮ್ಮನ್ನಗಲಿದ ಶ್ರೀಎ.ಕೃಷ್ಣ, ಶ್ರೀಬಸವರಾಜ ರುಮಾಲರನ್ನು ನೆನೆದು ಹಿರಿಯ ಸಾಹಿತಿ ಡಿ.ಎನ್.ಅಕ್ಕಿ ಬರೆದ ಕಾವ್ಯ

ಹೂಬೊಗಸೆ ನಮನ

ಕೃಷ್ಣೆಭೀಮೆಯರ ತಿಳಿನೀರಿನಲ್ಲ್ಲಿ
ತೇಲಿಹೋದವೆರಡು ದೀಪ|
ಮನಮನದ ಕೊಳದಲೂಅರಳಿನಿಂತಿವೆ
ಬಿಳಿ ಕಮಲದಂಥ ರೂಪ || ೧ ||

ಹರಿವ ಕಲಕಲದಿ ಬೆರೆತು ಹೋಯ್ತು
ಓಂಕಾರ ಮುರಳಿನಾದ |
ಬಸವ ಬೆಳಕಿನ ರುಮಾಲು ಕಳಚಿ
ಸೇರಿ ಶಿವನ ಪಾದ || ೨ ||

ಎದೆಗಡಲ ಮುತ್ತುಗಳ ಮಿಂಚು ಹೊಳಪಿಗೆ
ಶ್ವೇತಪಕ್ಷಿ ಹಾರಿ |
ಚಂದ್ರಲಾಂಬೆಯ ಕರುಣ ಕಿರೀಟದಿ
ಸಗರನಾಡ ತೋರಿ || ೩||

ರುಮಾಲು ಬಸವನ ವಿಭೂತಿ ಬಿಳುಪಿಗೆ
ಬೆಳಕು ಪಡೆದ ಜನತೆ |
ನಿಮ್ಮ ಚೆನ್ನುಡಿಯು ವಚನದೈಸಿರಿಯು
ಬಾಳಹಾದಿಗ್ಹಣತೆ || ೪ ||

ಜೀವಂತ ಶವಗಳನು ನಗಿಸಿದಾತ
ಪರದಲ್ಲು ನಗಿಸಲ್ಹೋದ |
ಭಾವಬೆಸುಗೆಯಲಿ ನೀಡಿದೊಲವು
ಅದುವೆ ಶಿವನ ಪ್ರಸಾದ ||೫ ||

ಶುಭಸುಪ್ರಭಾತಕೆ ನಸುನಗುವ ನಸುಕು
ದಿಸೆದಿಸೆಗೂ ದೇವಗಾನ |
ಸಹಜದಾರಿಯಲಿ ನಡೆದ ಕೃಷ್ಣ
ಆ ದಿವ್ಯ ಬೆಳಕಿನೊಳು ಲೀನ || ೫ ||

ನಿಮ್ಮ ಬರುವಿಕೆಗೆ ನೋಂತುನಿಂತಿದೆ
ಸಗರನಾಡ ಜನತೆ |
ಬೆಳೆವ ಕುಡಿಗಳಿಗೆ ತಿಳಿಬೆಳಕ ನೀಡಲು
ಮತ್ತೆ ಬನ್ನಿ ಧರೆಗೆ || ೬ ||

ತಾಳಲಾರೆನು ಬಸವ ಕೃಷ್ಣರೆ ನಿಮ್ಮೀ
ಅಗಲಿಕೆಯ ನೋವು ಬಾಧೆ |
ಹರಿಹರರಂದದಿ ಒಂದಾಗಿ ಬನ್ನಿ
ಸುರಪುರದ ಸಿರಿಯ ನೆಲಕೆ || ೭ ||

ಮುಳ್ಳು ತುಳಿದು ಹೂ ಹರಡಿ ನಡೆದಿರಿ
ನೆಟ್ಟು ಒಳಿತ ಸಸಿನ |
ಕಂಬನಿಯ ಮನದಿ ಅರ್ಪಿಸುವೆ ನಿಮಗೆ ಹೂಬೊಗಸೆ ನಮನ ದವನ || ೮ ||
—————-
ಡಿ.ಎನ್.ಅಕ್ಕಿ.
ದಿ.೧೪.೦೭.೨೦೨೦.
9448577898.

———-

Related Articles

Leave a Reply

Your email address will not be published. Required fields are marked *

Back to top button