ಗಪೀಜೋ ಬಂದು ಹೊರಡುವ ಮುನ್ನ..
ಕೋವಿಡ್-19 ಸಂಕಷ್ಟ ಜಗತ್ತಿನೆಲ್ಲಡೆ ಆವರಿಸಿದ್ದು. ಹಲವಾರು ದೇಶಗಳ ಸ್ಥಿತಿ ಕಠಿಣವಾಗಿದೆ. ಕೊರೊನಾ ಮಹಾಮಾರಿಗೆ ಹಲವಾರು ಜನ ತತ್ತರಿಸಿ ಹೋಗಿದ್ದಾರೆ. ಬಡವರು ದಿನ ಕೂಲಿಕಾರರು ಬೆಂದಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿದೆ ಎಂಬ ಲೆಕ್ಕಾಚಾರದ ನಡುವೆಯೇ ಇದೇ ಆಗಸ್ಟ ನಲ್ಲಿಯೇ ಈ ಗಪೀಜೋ ಬಂದು ಭಕ್ತರಿಂದ ಎಂದಿನಂತೆ ಸಾಂಪ್ರದಾಯಿಕ ಪೂಜಿತಗೊಂಡು ಹೊರಡಲು ಸಿದ್ಧರಾಗಿದ್ದಾರೆ.
ಹೌದು.. ಈ ಗಪೀಜೋ ಯಾರು ಎನ್ನುವ ಕುತುಹಲ ನಿಮ್ಮಲ್ಲಿ ಉಂಟಾಗಿದೆ ಅಲ್ವಾ..ಇವರಾರು ಅಂದರೆ ‘ಗ’ ಅಂದ್ರೆ ಗಣೇಶ, ‘ಪೀ’ ಎಂದರೆ ಪೀರಗಳು, ‘ಜೋ’ ಎಂದರೆ ಜೋಕುಮಾರ ಈ ಮೂವರ ಮೊದಲು ಅಕ್ಷರಗಳನ್ನು ಸೇರಿಸಿ ನಾನು ‘ಗಪೀಜೋ’ ಎಂದಿದ್ದೇನೆ ಅಷ್ಟೆ. ವಿಚಲಿತರಾಗುವ ಅಗತ್ಯವಿಲ್ಲ.
ಇಲ್ಲಿ ವಿಶೇಷವೆಂದರೆ ಈ ಮೂವರಲ್ಲಿ ಗಣೇಶನನ್ನು ಮಣ್ಣಿನಿಂದಲೇ ಮೂರ್ತಿ ತಯಾರಿಸಿ ಪೂಜಿಸಿ ನಂತರ ನೀರಲ್ಲಿ ಲೀನವಾಗಿಸಲಾಗುತ್ತದೆ.
ಅದರಂತೆ ಜೋಕುಮಾರನನ್ನು ಸಹ ಪ್ರತಿಮೆ ಮಾಡಿ ಪೂಜಿಸಿ ನಂತರ ನೀರಲ್ಲಿ ಲೀನವಾಗಿಸಲಾಗುತ್ತದೆ. ಹೆಚ್ಚು ಕಡಿಮೆ ಅದರಂತೆಯೇ ಮೋಹರಂ ಅಂಗವಾಗಿ ಜನ್ಮಿಸುವ ಪೀರಗಳನ್ನು ಬಡಿಗೆಯೊಂದಕ್ಕೆ ಬೆಳ್ಳಿಯ ಅಥವಾ ತಾಮ್ರದಲೋಹಗಳಿಂದ ಕೂಡಿರುವ ಪಂಜಾಗಳನ್ನು ಮತ್ತು ವಿವಿಧ ಬಗೆಬಗೆಯ ಬಟ್ಟೆಗಳಿಂದ ಪೀರಗಳನ್ನು ತಯಾರಿಸಿ ಕೂಡಿಸಿ ಪೂಜಿಸಿ ಮೆರವಣಿಗೆ, ಇತರೆ ಸಾಂಸ್ಕøತಿಕ ಕಾರ್ಯಕ್ರಮದ ನಂತರ ಕೊನೆಯಲ್ಲಿ ಪೀರಗಳನ್ನು ಕೆರೆ ದಂಡೆಯಲ್ಲಿ ದಫನ್ ಮಾಡಲಾಗುತ್ತದೆ.
ಹೆಚ್ಚು ಕಡಿಮೆ ಈ ಮೂವರು ಪ್ರತಿವರ್ಷ ಜನ್ಮ ತಾಳುತ್ತಾರೆ ಮತ್ತೆ ಕೊನೆಯಲ್ಲಿ ಅಂತ್ಯವಾಗುತ್ತಾರೆ. ಇಂತಹ ವಿಶೇಷತೆ ಹೊಂದಿದ ಗಪೀಜೋ ಒಂದೇ ತಿಂಗಳಲ್ಲಿ ಬಂದು ಹೊರಡಲು ಸಿದ್ಧರಾಗಿದ್ದಾರೆ. ಈ ಸಂದರ್ಭ ಅವರಿಗೆ ಜನ ಬೇಡಿಕೊಳ್ಳುವದೊಂದೆ ಬಂದಿದ್ದೀರಿ ಈ ಕೊರೊನಾ ಎಂಬ ಮಹಾಮಾರಿ ತೆಗೆದುಕೊಂಡು ಹೋಗಿ ಮತ್ತೆ ತರಲೇ ಬೇಡಿ ಎಂಬ ಒಕ್ಕೊರಲಿನ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದರೆ ತಪ್ಪಿಲ್ಲ.
ಜನನಾಡಿ ದೇವತೆಗಳಾದ ಈ ಸಾಂಪ್ರದಾಯಿಕ ಸಾಂಸ್ಕøತಿಕ ಗಪೀಜೋ ಜನರ ಆಸೆಯಂತೆ ಸಂಕಷ್ಟವನ್ನು ಹರಣ ಮಾಡಿ ಬೇಗನೆ ಕೊರೊನಾ ಹೆಮ್ಮಾರಿಯನ್ನು ಇಡಿ ಪ್ರಪಂಚದಿಂದಲೇ ಓಡಿಸಲಿ ಎಂಬುದು ಈ ಗಪೀಜೋ ಭಕ್ತರ ಆಶಯವಾಗಿದೆ.
ಗಣೇಶ, ಮೋಹರಂ ಪೀರ ಸೇರಿದಂತೆ ಜೋಕುಮಾರರು ಸಹ ನಾಡಿನಲ್ಲಿ ಓಣಿ ಓಣಿಗೆ ಬಂದು ಹೊರಟು ನಿಂತಿದ್ದಾರೆ..
ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ದೇಶದ ಜನ ಸಾಂಸ್ಕøತಿಕ ಹಬ್ಬಗಳನ್ನು ಸಾಂಪ್ರದಾಯಿಕವಾಗಿ ಮಾಡಿ ಮುಗಿಸಿದ್ದಾರೆ. ಇದು ಅವರ ನಂಬಿಕೆಗೆ ಹಿಡಿದ ಕೈಗನ್ನಡಿ. ಈಗಲಾದರೂ ಗಣೇಶ, ಮೋಹರಂ ಪೀರಗಳು ಸೇರಿದಂತೆ ಜೋಕುಮಾರರು ಜನಪದರ ನಂಬಿಕೆ ಹುಸಿಗೊಳಿಸದಿರಲಿ. ಮಹಾಮಾರಿ ಕೊರೊನಾ ಇಡಿ ಜಗತ್ತಿನಿಂದಲೇ ಮಾಯಗೊಳಿಸಲಿ, ಸಮೃದ್ಧ ಬದುಕು ಒದಗಿಸಲಿ. ಪ್ರಕೃತಿ ಮಾತೆ ಈ ಸಾಂಪ್ರದಾಯಿಕ ಜನಪದರ ಪ್ರಾರ್ಥನೆ ಕೇಳಿ ಅವರ ಅಳಲನ್ನು ಅರಿತು ಕೊರೊನಾ ಮಹಾಮಾರಿಯನ್ನು ಸಂಹರಿಸಲಿ.
ಆಗಸ್ಟ ನಲ್ಲಿಯೇ ಸ್ವಾತಂತ್ರ್ಯೋತ್ಸವ ಆಚರಿಸುವದರೊಂದಿಗೆ ಗಣೇಶ ಬಂದ, ನಂತರ ಜೊತೆಯಲ್ಲಿಯೇ ಮೋಹರಂ ಪೀರಗಳು ಬಂದರು, ಹಿಂದೆಯೇ ಜೋಕುಮಾರನು ಧರೆಗಿಳಿದಿದ್ದಾನೆ. ಜಾನಪದರ ಆಸೆ ಪ್ರಾರ್ಥನೆ ಹುಸಿಗೊಳಿಸದೆ ಸಾಂಪ್ರದಾಯಿಕ ಸಾಂಸ್ಕøತಿಕ ಹಬ್ಬಗಳಿಗೆ ಧಕ್ಕೆ ತಾರದೆ ಈ ಎಲ್ಲರೂ ದೈವಸ್ವರೂಪಿಗಳು ಕೂಡಲೇ ಕೊರೊನಾ ಸಂಕಷ್ಟದಿಂದ ನಮ್ಮ ದೇಶ ಅಷ್ಟೆ ಅಲ್ಲ ಜಗತ್ತನ್ನು ಮುಕ್ತಿ ಪಡಿಸಲಿ ಎಂಬುದೊಂದೆ ಒಕ್ಕರಣೆ ಆಗಿದೆ.
-ಮಲ್ಲಿಕಾರ್ಜುನ ಮುದನೂರ.