ಚಿತ್ರನಟ ಶಶಿಕುಮಾರ್ ಯಾವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸ್ತಾರೆ?
ಪಾಲಿಟಿಕಲ್ ರೀ-ಎಂಟ್ರಿ ನೀಡಲಿದ್ದಾರೆ ನಟ ಶಶಿಕುಮಾರ್! ಕಮಲ ಹಿಡಿತಾರಂತೆ ಶಶಿ?
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಖ್ಯಾತ ನಟ ಶಶಿಕುಮಾರ್ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ನಟ ಶಶಿಕುಮಾರ್ ಮತ್ತೊಮ್ಮೆ ರಾಜಕೀಯ ಅದೃಷ್ಟ ಪರೀಕ್ಷೆಗೆ ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.
2008ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಬ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟ ಶಶಿಕುಮಾರ್ ಅಲ್ಪಮತಗಳ ಅಂತರದಲ್ಲಿ ಸೋಲುಂಡಿದ್ದರು. ಆದರೆ, 2013ರ ಚುನಾವಣೆ ವೇಳೆ ನಟ ಶಶಿಕುಮಾರ್ ಗೆ ಚಳ್ಳಕೆರೆ ಮತಕ್ಷೇತ್ರದಿಂದ ಟಿಕೆಟ್ ಸಿಕ್ಕಿರಲಿಲ್ಲ. ಚಳ್ಳಕೆರೆ ಮತಕೇತ್ರದಲ್ಲಿ ಕಾಂಗ್ರೆಸ್ ಅಬ್ಯರ್ಥಿಯಾಗಿದ್ದ ಟಿ.ರಘುಮೂರ್ತಿ ಗೆದ್ದು ಶಾಸಕರಾಗಿದ್ದಾರೆ. ಪರಿಣಾಮ ಚಳ್ಳಕೆರೆ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಿದ್ದು ಉತ್ತಮ ಕಾರ್ಯವೈಖರಿ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಹೀಗಾಗಿ, ನಟ ಶಶಿಕುಮಾರ್ ಚಿತ್ತ ಈಗ ಬೇರೆ ಪಕ್ಷಗಳತ್ತ ಹರಿದಿದೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಚಳ್ಳಕೆರೆಗೆ ಭೇಟಿ ನೀಡಿದ ನಟ ಶಶಿಕುಮಾರ್ ಬಿಜೆಪಿಯ ಮಾಜಿ ಶಾಸಕ ಬಸವರಾಜ ಮಂಡಿಮಠ ಅವರ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ. ಹೀಗಾಗಿ, ಬಿಜೆಪಿ ಅಬ್ಯರ್ಥಿಯಾಗಿ ಚಳ್ಳಕೆರೆಯಿಂದಲೇ ಕಣಕ್ಕಿಳಿಯಲು ಚಿಂತನೆ ನಡೆಸಿದ್ದಾರೆಂಬ ಗುಸುಗುಸು ಕೇಳಿ ಬರುತ್ತದೆ. ಮತ್ತೊಂದು ಕಡೆ ಮೊಳಕಾಲ್ಮೂರು ಕ್ಷೇತ್ರದಿಂದ ಜೆಡಿಎಸ್ ಅಬ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ, ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಅಲ್ಲಿನ ಜನರೊಂದಿಗೂ ಸಂಪರ್ಕ ಬೆಳೆಸಿದ್ದಾರೆ ಎನ್ನಲಾಗುತ್ತಿದೆ. ಆದ್ರೂ, ನಟ ಶಶಿಕುಮಾರ್ ಕಮಲ ಹಿಡಿಯೋದು ಪಕ್ಕಾ ಅಂತ ಅವರ ಬೆಂಬಲಿಗರು ಹೇಳುತ್ತಿದ್ದಾರೆ.
ಚಳ್ಳಕೆರೆ ಭೇಟಿ ವೇಳೆ ಪತ್ರಕರ್ತರಿಗೆ ಪ್ರತಿಕ್ರಿಯಿಸಿರುವ ನಟ ಶಶಿಕುಮಾರ್ ಇದೊಂದು ಸೌಹಾರ್ಧ ಭೇಟಿ. ನಾನು ಕಾಂಗ್ರೆಸ್ ಶಾಸಕರನ್ನೂ ಭೇಟಿ ಮಾಡಿದ್ದೇನೆ ಎಂದಿದ್ದಾರೆ. ಅಂತೆಯೇ ಸಕ್ರಿಯ ರಾಜಕಾರಣದಲ್ಲಿ ತೊಡಗುವುದು ಖಚಿತ ಅಂದಿರುವ ಅವರು ಚಿತ್ರದುರ್ಗ ಜಿಲ್ಲೆಯ ಮತಕ್ಷೇತ್ರವೊಂದರಿಂದ ಚುನಾವಣ ಅಖಾಡಕ್ಕಿಳಿಯುವ ಇರಾದೆ ಇದೆ ಅಂದಿದ್ದಾರೆ. ಆದರೆ, ಯಾವ ಪಕ್ಷ, ಯಾವ ಮತಕ್ಷೇತ್ರ ಎಂಬುದನ್ನು ರಹಸ್ಯವಾಗಿಯೇ ಇಟ್ಟಿದ್ದಾರೆ. ನಟ ಶಶಿಕುಮಾರ್ ಹೇಳಿಕೆ ನೀಡಿದ ವಿಡಿಯೋ ವೈರಲ್ ಆಗಿದ್ದು ಚಿತ್ರದುರ್ಗ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ನಟ ಶಶಿಕುಮಾರ್ ಆಗಮನದಿಂದ ಕೋಟೆನಾಡಿನ ರಾಜಕಾರಣ ರಂಗೇರಲಿದೆ. 2018ರ ಚುನಾವಣೆ ವೇಳೆ ಚಿತ್ರದುರ್ಗ ಜಿಲ್ಲೆ ರಾಜ್ಯದ ಗಮನ ಸೆಳೆಯಲಿದೆ. ಆದರೆ, ಶಶಿಕುಮಾರ್ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ. ಈ ಸಲದ ಚುನಾವಣೆಯಲ್ಲಿ ದುರ್ಗದ ಮಂದಿ ಶಶಿಕುಮಾರ್ ಕೈ ಹಿಡೀತಾರಾ ಅನ್ನೋದನ್ನು ಕಾದು ನೋಡಬೇಕಿದೆ.
-ಸಂ