ಮಾಜಿ ಡಿವೈಎಸ್ಪಿ ಅನುಪಮಾ ಶಣೈ ಇನ್ ಪಾಲಿಟಿಕ್ಸ್.!
ನನಗಾದ ಅನ್ಯಾಯದ ವಿರುದ್ಧ ಕಾನೂನು ಹೋರಾಟಃ ಶೆಣೈ
ಬಳ್ಳಾರಿಃ ನಾನು ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರಿ ರಾಜಕಾರಣಿಗಳ ವಿರೋಧಿಯೇ ಹೊರತು ರಾಜಕಾರಣದ ವಿರೋಧಿ ಅಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ. ಆದರೆ ಯಾವ ಕ್ಷೇತ್ರವೆಂಬುದು ಇನ್ನೂ ನಿರ್ಧರಿಸಿಲ್ಲ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ತಿಳಿಸಿದರು.
ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದೇ ನವೆಂಬರ್ 1 ರಂದು ಹೊಸ ಪಕ್ಷ ನಿರ್ಮಾಣದ ಹಿನ್ನೆಲೆ ಕೂಡ್ಲಿಗಿ ಪಟ್ಟಣದಲ್ಲಿ ಆಯೋಜಿಸುತ್ತಿರುವ ನೂತನ ಪಕ್ಷದ ಉದ್ಘಾಟನಾ ಸಮಾರಂಭಕ್ಕೆ ಕೇವಲ 300 ಜನರನ್ನು ಆಹ್ವಾನಿಸಲಾಗಿದೆ. ಅಂದು ಪಕ್ಷದ ಹೆಸರು ಮತ್ತು ಪಕ್ಷದ ಧ್ಯೇಯೋದ್ದೇಶಗಳ ಬಗ್ಗೆ ಘೋಷಿಸಲಾಗುವುದು ಎಂದು ತಿಳಿಸಿದರು.
ನೂತನ ಪಕ್ಷದವತಿಯಿಂದ ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ನಿರ್ಣಯ ಕೈಗೊಳ್ಳಲಾಗಿದೆ. 80 ಕ್ಷೇತ್ರದಲ್ಲಿ ಗೆಲ್ಲುವ ಗುರಿಯಿಟ್ಟು ಕೊಳ್ಳಲಾಗಿದೆ ಎಂದು ಸ್ಪಷ್ಟ ಪಡಿಸಿದರು. ಮತ್ತು ನನಗಾದ ಅನ್ಯಾಯದ ವಿರುದ್ಧ ಕಾನೂನು ಸಮರ ಮುಂದುವರೆಸುತ್ತೇನೆ. ಆದರೆ ಮರಳಿ ಇಲಾಖೆಗೆ ಬರುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.