ಮಕ್ಕಳಿಗೆ ಹೀಗೊಂದು ಪ್ರಶ್ನೆ – ನೀವು ಗಿಡದ ಯಾವ ಭಾಗವಾಗಲು ಇಷ್ಟ.?
ಮಕ್ಕಳಿಗೆ ಈ ಪ್ರಶ್ನೆ ಕೇಳಿ ಆ ಮೇಲೆ ಕಥೆ ಓದಿ ಹೇಳಿ

ದಿನಕ್ಕೊಂದು ಕಥೆ
ನೀವು ಗಿಡದ ಯಾವ ಭಾಗವಾಗಲು ಇಷ್ಟ?
ಒಮ್ಮೆ ಶಾಲೆಯಲ್ಲಿ ಮೇಷ್ಟ್ರು ಮಕ್ಕಳನ್ನು ಕುರಿತು ಮಕ್ಕಳೆ, “ನೀವು ಗಿಡದ ಯಾವ ಭಾಗವಾಗಲು ಇಷ್ಟಪಡ್ತೀರಾ ? ಮತ್ತು ಏಕೆ ?” ಎಂದು ಕೇಳಿದರು. ಆಗ ಒಬ್ಬ ಹುಡುಗ ಎದ್ದು ನಿಂತು “ಸರ್ ನಾನು ಎಲೆಯಾಗೋಗೆ ಇಷ್ಟಪಡ್ತೀನಿ.. ಏಕೆಂದರೆ ಎಲೆ ದಣಿದು ಬಂದವರಿಗೆ ನೆರಳಾಗುತ್ತೆ, ಎಲ್ಲಾ ಜೀವಿಗಳಿಗೂ ಉಸಿರು ನೀಡುತ್ತೆ, ಹಣ್ಣಾಗಿ ಉದುರಿದರೆ ಕೊಳೆತು ಗೊಬ್ಬರವಾಗುತ್ತೆ” ಎಂದ. ಮೇಷ್ಟ್ರು ಶಭಾಷ್, ಕೂತ್ಕೋ… ಮೂಲೆಯವ್ನು ನೀನು ಹೇಳು ಏನಾಗ್ತಿಯಾ?
ಮೂಲೆಯ ಹುಡುಗ “ಸರ್ ನಾನು ಹೂವಾಗ್ತೀನಿ, ಏಕೆಂದರೆ ಹೂವನ್ನು ಎಲ್ಲರೂ ಮೆಚ್ತಾರೆ, ಅದು ಬೀರುವ ಸುಗಂಧವನ್ನು ಎಲ್ಲರೂ ಇಷ್ಡಪಡ್ತಾರೆ. ದೇವರಿಗೂ ಕೂಡಾ ಹೂವಿನಿಂದಲೇ ಅಲಂಕಾರ ಮಾಡ್ತಾರೆ” ಎಂದ. ಮೇಷ್ಟ್ರು ಗುಡ್. ಲಾಸ್ಟ್ ಬೆಂಚು, ನೀನ್ ಏನಾಗ್ತೀಯೋ?
ಲಾಸ್ಟ್ ಬೆಂಚು ಹುಡುಗ “ಸರ್ ಹಣ್ಣಾಗಲು ಬಯಸ್ತೀನಿ. ಏಕೆಂದರೆ ಹಣ್ಣು ರುಚಿರುಚಿಯಾಗಿರುತ್ತೆ, ಚಿಕ್ಕಮಕ್ಳು ದೊಡ್ಡವ್ರು ಎಲ್ರೂ ಇಷ್ಟಪಡ್ತಾರೆ, ಹಸಿದವರಿಗೆ ಆಹಾರವಾಗುತ್ತೆ, ಮಾರಿದರೆ ದುಡ್ಡು ಸಿಗುತ್ತೆ . ಕಷ್ಟದಲ್ಲಿ ಸಹಾಯವಾಗುತ್ತೆ” ಎಂದ. ಮೇಷ್ಟ್ರು ವೆರಿಗುಡ್… ಏಯ್ ಮುಂದಿನವ್ನು, ನೀನ್ ಏನಾಗ್ತೀಯೋ?
ಹುಡುಗ “ಸರ್ ರೆಂಬೆಯಾಗೋಕೆ ಇಷ್ಟಪಡ್ತೀನಿ, ಏಕೆಂದರೆ ರೆಂಬೆಗಳಲ್ಲಿ ಪಕ್ಷಿಗಳೆಲ್ಲ ಕೂತು ವಿಶ್ರಾಂತಿ ಪಡ್ಕೊತವೆ, ಗೂಡುಗಳನ್ನು ಕಟ್ಟಿ ಮರಿಗಳನ್ನು ಸಾಕ್ತವೆ, ರೆಂಬೆ ಒಣಗಿ ಬಿದ್ದರೆ ಅದನ್ನೇ ಒಲೆಗೆ ಒಟ್ಟೋದಿಕ್ಕೂ ಬಳಸ್ತೀವಿ.” ಎಂದ. ಮೇಷ್ಟ್ರು ಫೈನ್, ಕೂತ್ಕೋ. ಕೈ ಎತ್ತಿದ್ದೀಯಲ್ಲ , ನೀನ್ ಆಗೋಕೆ ಇಷ್ಟಪಡ್ತೀಯಾ?
ಕೈ ಎತ್ತಿದ ಹುಡುಗ ಸಂಕೋಚದಿಂದ ಎದ್ದು ನಿಂತು “ಸರ್ ನಾನು ಬೇರಾಗಲು ಇಷ್ಟಪಡ್ತೀನಿ… ಬೇರು ಭೂಮಿಯೊಳ್ಗಡೆ ಗಟ್ಟಿ ಮಣ್ಣನ್ನು ಸೀಳ್ಕೊಂಡು ಕಷ್ಟದಿಂದ ಬೆಳೆಯುತ್ತೆ .. ಬೇರಿಗೆ ಬೆಟ್ಟಗುಡ್ಡ ಸೂರ್ಯ ಚಂದ್ರ ನಕ್ಷತ್ರಗಳು ಮನುಷ್ರ್ಯು ಪ್ರಾಣಿಪಕ್ಷಿಗಳು ಮನೆಗಳು ಒಂದೂ ಕಾಣಿಸಲ್ವಂತೆ , ಆದ್ರೂ ಅದು ಕೊರಗದೆ ತನ್ನ ಪಾಡಿಗೆ ಸತ್ವ ಹೀರಿ ಗಿಡವನ್ನು ಬೆಳೆಸುತ್ತಂತೆ …. ನಾನೂ ಕೂಡಾ ಪ್ರಪಂಚ ನೋಡಿಲ್ಲ , ಬೇರೂ ಕೂಡೂ ಪ್ರಪಂಚ ನೋಡಿಲ್ಲ.. ಬೇರು ಕತ್ತಲಿನಲ್ಲೇ ಹುಟ್ಟಿ ಕತ್ತಲಿನಲ್ಲೇ ಕಮರಿ ಹೋಗುತ್ತೆ .. ಬೇರಿನಂತೆ ನಾನೂ ಕೂಡಾ ಅಡೆತಡೆಗಳನ್ನು ಎದುರಿಸಿ ಬೇಳೀಬೇಕು… ದುಃಖವಾದಾಗಲೆಲ್ಲ ಬೇರನ್ನು ನೆನೆದು ಸಮಾಧಾನ ಮಾಡ್ಕೊತಿನಿ” ಎಂದಾಗ, ಮೇಷ್ಟ್ರು ಅತ್ಯಾನಂದದಿಂದ ಆ ಅಂಧ ಹುಡುಗನ ಕೆನ್ನೆಗಳನ್ನು ಚಿವುಟಿ ಮುದ್ದಿಸಿ ಭಾವುಕರಾದರು.
🖊️ಸಂಗ್ರಹ🖋️
*ಷ.ಬ್ರ.ಡಾ.ಅಭಿನವ ರಾಮಲಿಂಗ ಶಿವಶರಣ ಮಹಾಸ್ವಾಮೀಜಿ.*
📞 – 9341137882.