ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಜೋಗತಿ ಮಂಜಮ್ಮಗೆ ಗಾಲಿ ರಡ್ಡಿ ದಂಪತಿಯಿಂದ ಸನ್ಮಾನ
ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಜೋಗುತಿ ಮಂಜಮ್ಮಗೆ ಗಾಲಿ ರಡ್ಡಿ ದಂಪತಿಯಿಂದ ಸನ್ಮಾನ
ಬೆಂಗಳೂರಃ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಬಳ್ಳಾರಿಯ ಖ್ಯಾತ ಕಲಾವಿದೆ ಮಂಜಮ್ಮ ಜೋಗುತಿ ಅವರಿಗೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹಾಗೂ ಅವರ ಧರ್ಮಪತ್ನಿ ಲಕ್ಷ್ಮೀ ಅರುಣಾ ಅವರು ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ಬೆಂಗಳೂರಿನ ತಮ್ಮ ನಿವಾಸಕ್ಕೆ ಖ್ಯಾತ ಕಲಾವಿದೆ ಮಂಜಮ್ಮ ಜೋಗತಿ ಅವರನ್ನು ಆಹ್ವಾನಿಸಿ ತುಂಬು ಹೃದಯದಿಂದ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು. ಬಳ್ಳಾರಿ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಗತ ವೈಭವದ ಸಡಗರ ಸಂಭ್ರಗಳನ್ನು ಕಂಡ ಬಳ್ಳಾರಿ ಸೀಮೆಯು ಅನೇಕ ಮಹಾನ್ ಕಲಾವಿದರನ್ನು ಕಂಡ ಪುಣ್ಯ ಭೂಮಿ. ವಿಶ್ವ ವಿಖ್ಯಾತ ಜೋಳದ ರಾಶಿ ದೊಡ್ಡನಗೌಡರು, ಬಳ್ಳಾರಿ ರಾಘವ, ಕಾಳವ್ವ ಜೋಗತಿ, ತೊಗಲು ಗೊಂಬೆ ಆಟದ ಬೆಳಗಲಿ ವೀರಣ್ಣನವರು ಸೇರಿದಂತೆ ಹೀಗೆ ಅನೇಕ ಕಲಾವಿದರನ್ನು ಕಂಡ ಬಳ್ಳಾರಿ ಜಿಲ್ಲೆ, ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಸಡಗರ ಸಂಭ್ರಮಗಳನ್ನು ಕಾಣುತ್ತಲೇ ಬಂದಿದೆ.
ಪ್ರಸಕ್ತವಾಗಿ ಕೇಂದ್ರ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಮಂಜಮ್ಮನವರು ಕಳೆದ ೨೦ ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಮೊದಲ ಬಾರಿಗೆ ನಾವು ನಗರಸಭೆಯ ಆಡಳಿತದ ಚುಕ್ಕಾಣಿ ಹಿಡಿದಾಗ ನಗರಸಭೆಯ ವತಿಯಿಂದ ನಿರ್ಮಿಸಲಾದ ಪಾರ್ಕ್ ಒಂದರ ಉದ್ಘಾಟನಾ ಸಮಾರಂಭದಲ್ಲಿ ಇವರ ನೃತ್ಯದ ಅದ್ಬುತ ಕಲೆಯನ್ನು ಕಂಡು ನಾನು ಮೂಖವಿಸ್ಮಿತನಾದೆ.
ಇಂತಹ ಅದ್ಬುತ ಕಲೆಯನ್ನು ನಾನು ಎಲ್ಲಿಯೂ ಕಂಡಿರಲಿಲ್ಲ. ಮುಂದೆ ನಾನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾದ ಸಂದರ್ಭದಲ್ಲಿ ಮಂಜಮ್ಮ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವಂತಹ ಅವಕಾಶ ದೊರಕಿರುವುದು ನಿಜಕ್ಕೂ ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ.
ಮಂಜಮ್ಮ ಅವರು ಇನ್ನೂ ನೂರಾರು ಕಾಲ ಬಾಳಿ ಬದುಕಲಿ, ಅವರ ಕಲೆಗೆ ನಮ್ಮ ಸದಾ ಪ್ರೋತ್ಸಾಹ ಇರುತ್ತದೆ. ಇಂತಹ ಕಲಾವಿದೆಯನ್ನು ಕಂಡ ಬಳ್ಳಾರಿ ಜಿಲ್ಲೆಯ ಜನತೆಗೆ ನಿಜಕ್ಕೂ ಹೆಮ್ಮಯ ಸಂಗತಿ.
ಇದಕ್ಕೆ ಕಾರಣೀಭೂತರಾದ ಎಲ್ಲರಿಗೂ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ದಂಪತಿಗಳಿಂದ ಸನ್ಮಾನ ಸ್ವೀಕರಿಸುತ್ತಿದ್ದಂತೆ, ಮಂಜಮ್ಮ ಜೋಗತಿ ಅವರು ಭಾವುಕರಾಗಿ ಅವರ ಕಣ್ಣಂಚಿನಲ್ಲಿ ನೀರು ತುಂಬಿ ಬಂದಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಂಜಮ್ಮ ಅವರು ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಕಲೆಗೆ ಪ್ರೋತ್ಸಾಹ ನೀಡಿರುವ ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಒಂದೇ ಮನವಿಗೆ ನನಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಲು ಕಾರಣರಾದಿರಿ ತಾವು ನನಗೆ ಸಾಕಷ್ಟು ಸಹಾಯ ಮಾಡಿರುವಿರಿ ಎಂದು ಹೇಳುತ್ತಾ, ರೆಡ್ಡಿ ಅವರಿಗೆ ಬಂದಿರುವ ಕಷ್ಟಗಳನ್ನು ನೆನಪಿಸಿಕೊಂಡ ಮಂಜಮ್ಮ ಅವರು ತಮ್ಮ ಕಣ್ಣಲ್ಲಿ ನೀರು ತಂದು ಮಾತು ಹೊರಡದಂತಾಗಿ ಗದ್ಗದಿತರಾದರು.
ಪಕ್ಕದಲ್ಲಿಯೇ ಇದ್ದ ಜನಾರ್ಧನ ರೆಡ್ಡಿ ಅವರು ಮಂಜಮ್ಮ ಅವರನ್ನು ಸಂತೈಸಿದರು. ಮತ್ತೆ ಸುಧಾರಿಸಿಕೊಂಡು ಮಾತನಾಡಿದ ಅವರು, ರೆಡ್ಡಿ ಅವರಿಗೆ ಒಳ್ಳೆಯದಾಗಲಿ, ಈ ಸರ್ಕಾರಗಳಲ್ಲಿಯೇ ನನಗೆ ಜಾನಪದ ಅಕಾಡೆಮಿ ಅಧ್ಯಕ್ಷನಾದೆ, ರಾಜ್ಯೋತ್ಸವ ಪ್ರಶಸ್ತಿ ಪಡೆದೆ ಇಂದು ಪದ್ಮಶ್ರೀ ಪ್ರಶಸ್ತಿಯನ್ನು ಇದೇ ಸರ್ಕಾರದಲ್ಲಿ ಪಡೆಯುತ್ತಿರುವುದು ನನಗೆ ತುಂಬಾ ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹಾಗೂ ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಭಾಗವಹಿಸಿದ್ದರು.