ಭೀ.ಗುಡಿಯಲ್ಲಿ ಗಮನಸೆಳೆಯುತ್ತಿರುವ ಬಲಭೀಮ ಗಣಪ
ಮದುವೆ ಮಂಟಪದಂತೆ ಸಿಂಗಾರ, ಭಕ್ತರಿಂದ ಸಾಲುಗಟ್ಟಿ ದರ್ಶನ
ಯಾದಗಿರಿ, ಶಹಾಪುರಃ ಸಮೀಪದ ಭೀಮರಾಯನ ಗುಡಿ ಕೃಷ್ಣ ಭಾಗ್ಯ ಜಲ ನಿಗಮ ವಸಾಹತುನಲ್ಲಿ ನಾಗರಿಕರೆಲ್ಲರೂ ಪ್ರತಿವರ್ಷದಂತೆ ಈ ವರ್ಷವು ಗಣೇಶ ಪ್ರತಿಷ್ಠಾಪನೆಯನ್ನು ಸಂಭ್ರಮದಿಂದ ಮಾಡಿದ್ದಾರೆ.
ವಿಶೇವೆಂದರೆ ಸ್ಥಳೀಯ ಆರಾಧ್ಯ ದೇವ ಬಲಭೀಮೇಶ್ವರರ ಜೊತೆ ಗಣೇಶ ಹೊಂದಿದ್ದ ದೊಡ್ಡ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದು, ಸರ್ವರ ಗಮನ ಸೆಳೆಯುತ್ತಿದೆ. ಅಲ್ಲದೆ ಗಣೇಶ ಪ್ರತಿಷ್ಠಾಪಿಸಿದ್ದ ಸ್ಥಳವನ್ನು ಸುಂದರ ಮದುವೆ ಮಂಟಪ ತರಹ ಅಲಂಕರಿಸಿಸಲಾಗಿದೆ. ಅಲ್ಲದೆ ಹೂವಿನ ಕುಂಡಗಳನ್ನು ಇಡಲಾಗಿದೆ. ವಿವಿಧ ಹೂವು ಹಾರ ತುರಾಯಿಗಳಿಂದ ಹಸಿರು, ಗಿಡಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ.
ವಿಶೇಷ ಅಲಂಕಾರ ನೋಡುಗರನ್ನು ಸಂತುಷ್ಠಿಗೊಳಿಸುತ್ತಿರುವುದು ಒಂದಡೆಯಾದರೆ, ಪ್ರತಿಮೆಯಲ್ಲಿ ಸ್ಥಳೀಯ ಆರಾಧ್ಯ ದೇವ ಬಲಭೀಮೇಶ್ವರರ ಪ್ರತಿಮೆಯೊಂದಿಗೆ ಗಣೇಶ ಕುಳಿತಿರುವುದು ನಾಗರಿಕರಲ್ಲಿ ಭಕ್ತಿಯನ್ನು ಇಮ್ಮಡಿಗೊಳಿಸುವಂತೆ ಮಾಡಿದೆ.
ಮಹಿಳೆಯರು ಮಕ್ಕಳು ಸಾಲು ಸಾಲು ನಿಂತು ಈ ಬಲಭೀಮೇಶ್ವರ ಗಣೇಶರ ದರ್ಶನ ಪಡೆಯುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಸಲ್ಲಿಸಲು ಇಲ್ಲಿ ಓರ್ವ ಅರ್ಚಕರನ್ನು ಸಹ ನೇಮಿಸಲಾಗಿದೆ. ನಿತ್ಯ ಪೂಜೆ ಗಣೇಶನಿಗೆ ವಿಶೇಷ ಖಾದ್ಯ ಪದಾರ್ಥಗಳ ನೈವೇದ್ಯ ಧೂಪ, ಭಜನೆ ಭಕ್ತಿಪೂರ್ವಕವಾಗಿ ಜರುಗುತ್ತವೆ ಎನ್ನುತ್ತಾರೆ ವಸಾಹತು ನಿವಾಸಿಗಳು.
ಗಣೇಶ ಹಬ್ಬ ಎಂದರೆ ಇಲ್ಲಿನ ನಿವಾಸಿಗಳಿಗೆ ಎಲ್ಲಿಲ್ಲದ ಸಂತಸ ಮೂಡುತ್ತದೆ. ಕಾರಣ ಬಡಾವಣೆ ಎಲ್ಲಾ ಜನರು ಒಂದಡೆ ಸೇರಿ ನಡೆಯುವ ಭಕ್ತಿ ಭಜನೆ, ಪೂಜೆ ಸೇರಿದಂತೆ ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಎಲ್ಲಿಲ್ಲದ ಆನಂದ ಎನ್ನುತ್ತಾರೆ ಮಹಿಳೆಯರು ಮತ್ತು ಮಕ್ಕಳು.
ಗಣೇಶ ಪ್ರತಿಷ್ಠಾಪನೆಗೆ ಸುಂದರ ಟೆಂಟ್, ಖುರ್ಚಿ, ಸೇರಿದಂತೆ ಇತರೆ ಅಲಂಕಾರಿಕ ವ್ಯವಸ್ಥೆ ಉತ್ತಮ ರೀತಿಯಿಂದ ಮಾಡಿರುವದರಿಂದ ಈ ಬಾರಿ ಇನ್ನಷ್ಟು ಜನರಲ್ಲಿ ಖುಷಿ ಹಚ್ಚುವಂತೆ ಮಾಡಿದೆ. ಪ್ರತಿಮೆಯಲ್ಲಿ ಗಣೇಶನೊಂದಿಗೆ ಬಲಭೀಮೇಶ್ವರರು ಇರುವದರಿಂದ ಸಾರ್ವಜನಿಕರಲ್ಲಿ ಇನ್ನಷ್ಟು ಹುಮ್ಮಸ್ಸು ಮೂಡಿದೆ. ನೋಡಲು ಅತ್ಯಾಕರ್ಷಕವಾಗಿದ್ದು, ಗುರುವಾರದಿಂದಲೇ ಜನ ತಂಡೋಪ ತಂಡವಾಗಿ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.