ಸಂತ ಶ್ರೇಷ್ಠ ಭಕ್ತ ಕನಕದಾಸರ ತತ್ವಾದರ್ಶ ಪಾಲಿಸಿ-ರಜಪೂತ
ಯಾದಗಿರಿಃ ಸಮಾಜದಲ್ಲಿಯ ನ್ಯೂನ್ಯತೆಗಳನ್ನು ತಮ್ಮ ಕೀರ್ತನೆಗಳ ಮೂಲಕ ವಿಡಂಬನಾತ್ಮಕವಾಗಿ ಹೇಳಿದ ಸಂತ ಶ್ರೇಷ್ಠ ಭಕ್ತ ಕನಕದಾಸರ ತತ್ವಾದರ್ಶಗಳು ನಮಗೆ ದಾರಿ ದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಹೇಳಿದರು.
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ಸಂತ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಮತ್ತು ಧರ್ಮ ಅಧೋಗತಿಗಿಳಿದಾಗ ಒಬ್ಬೊಬ್ಬ ಮಹಾ ಪುರುಷರು ಅವತರಿಸಿ ಸಮಾಜವನ್ನು ಉದ್ಧರಿಸುತ್ತಾರೆಂಬುದು ಬಹುಜನರ ಅಭಿಮತ. ಅಂತೆಯೇ ಕನ್ನಡ ನಾಡಿನಲ್ಲಿ ಅನೇಕ ಮಹಾನ್ ಸಮಾಜ ಸುಧಾರಕರನ್ನು ಧರ್ಮ ದೀಕ್ಷೆ ನೀಡಿದವರನ್ನು ಕಾಣುತ್ತೇವೆ. ಅವರ ಸಾಲಿನಲ್ಲಿ ಹೊಳೆಯುವ ನಕ್ಷತ್ರ ಎಂದರೆ ಕನಕದಾಸರು.
ಕರ್ನಾಟಕದಲ್ಲಿ 15 ಮತ್ತು 16ನೇ ಶತಮಾನದಲ್ಲಿ ಕಾಣಿಸಿಕೊಂಡ ದಾಸ ಪಂಥದಲ್ಲಿ ಸರಿ ಸುಮಾರು 250ಕ್ಕೂ ಹೆಚ್ಚಿನ ಹರಿದಾಸರಲ್ಲಿ ಇವರೊಬ್ಬರೇ ಕನ್ನಡ ಭಾಷೆಯ ಸುಪ್ರಸಿದ್ಧ ಕೀರ್ತನಕಾರರು. ಹಲವು ಜಾತಿ ಪಂಥಗಳಿಂದ ಕೂಡಿದ ಸಮಾಜದ ಏಳ್ಗೆಗಾಗಿ ಕೀರ್ತನೆಗಳನ್ನು ಬರೆದ ಶ್ರೇಷ್ಠ ಸಂತ ಹಾಗೂ ಅಪಾರ ಜನಪ್ರಿಯತೆಯನ್ನು ಪಡೆದ ಕವಿಯಾಗಿದ್ದರು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ದೇವಿಂದ್ರಪ್ಪ ಹಳಿಮನಿ ಉಪನ್ಯಾಸ ನೀಡಿ, ಕನಕದಾಸರ ವ್ಯಕ್ತಿತ್ವ ಸಮುದ್ರದ ಜಲಧಾರೆಯಂತೆ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಬಾಡ ಎಂಬ ಗ್ರಾಮದಲ್ಲಿ ಭೀರಪ್ಪ ಮತ್ತು ಬಚ್ಚಮ್ಮ ದಂಪತಿಗೆ 1695ರಲ್ಲಿ ಕನಕದಾಸರು ಜನಿಸುತ್ತಾರೆ. 101 ವರ್ಷ ಬಾಳಿದ ಕನಕದಾಸರ ಮೊದಲಿನ ಹೆಸರು ತಿಮ್ಮಪ್ಪ ಎಂದು ತಿಳಿಸಿದರು.
ಕನಕದಾಸರು ಭೂಮಿಯನ್ನು ಉಳುಮೆ ಮಾಡುತ್ತಿರುವಾಗ ಬಂಗಾರದ ಹಂಡೆಗಳು ಸಿಕ್ಕಾಗ, ಸಂಸಾರದ ವ್ಯಾಮೋಹ ತೊರೆದು ಅದೆಲ್ಲವನ್ನು ಸಮಾಜದ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಿಸಿದರು. ಅಂದಿನಿಂದ ಕನಕ ಎಂದು ಹೆಸರಾದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕನಕ ಸಾಹಿತ್ಯ ಲೋಕ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ರಾಮಸಮುದ್ರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ರಾಜು, ದೋರನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮಾಳಪ್ಪ, ಗುರುಮಠಕಲ್ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮನಿಶಾ ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ವಿತರಿಸಲಾಯಿತು. ತಾರಾಶ್ರೀ, ಮಲ್ಲಿಕಾರ್ಜುನ, ಕರೆಪ್ಪ ಅವರು ಸಮಾಧಾನಕರ ಬಹುಮಾನ ಪಡೆದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ವಿಠ್ಠಲ್ ಮದ್ನೂರ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗುರುನಾಥ ಗೌಡಪ್ಪನೋರ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಡಯಟ್ನ ಉಪನ್ಯಾಸಕ ಶಿವಪ್ಪ ಇತರರು ಉಪಸ್ಥಿತರಿದ್ದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಮತ್ತು ಕಲಾ ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಉಪನ್ಯಾಸಕ ಗುರುಪ್ರಸಾದ ವೈದ್ಯ ನಿರೂಪಿಸಿ ವಂದಿಸಿದರು.