ಹಿರಿಯ ಸಾಹಿತಿ ಡಾ.ಈಶ್ವರಯ್ಯಮಠ ಇನ್ನಿಲ್ಲ
ಪ್ರೀತಿಯ ರಾಘವೇಂದ್ರ ಹಾರಣಗೇರಾ ಅವರೇ, ನಿಮ್ಮ ಬರವಣಿಗೆಯನ್ನು ಗಮನಿಸಿದ್ದೇನೆ, ಕೈ ಪಳಗಿದೆ, ಓದು ಬರಹಕ್ಕೆ ಬದ್ದರಾಗಿರಿ. ನಿಮಗೆ ಉಜ್ವಲ ಭವಿಷ್ಯವಿದೆ ಎಂದು ನನ್ನ ಬರಹಗಳನ್ನು ಓದಿ ಪ್ರತಿಕ್ರಿಯಿಸಿದ ಮತ್ತು ಪ್ರೋತ್ಸಾಹ ಮಾರ್ಗದರ್ಶನ ನೀಡುತ್ತಿದ್ದ ಸಗರನಾಡಿನ ಹಿರಿಯ ಸಾಹಿತಿ, ಕನ್ನಡ ಪ್ರಾದ್ಯಾಪಕರು, ಶಿಕ್ಷಣ ಚಿಂತಕರು, ನಾಡು, ನುಡಿಯ ಬಗ್ಗೆ , ವಿಶೇಷವಾಗಿ ಶರಣ ಸಾಹಿತ್ಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಡಾ.ಈಶ್ವರಯ್ಯ ಮಠ ಅವರ ನಿಧನ ಶಿಕ್ಷಣ ಹಾಗೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ.
ಇತ್ತೀಚಿಗೆ ವಿನಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಆನ್ ಲೈನ್ ಪಾಠ ವರ್ಕೌಟ ಆಗಲ್ಲ ಎಂಬ ಲೇಖನವನ್ನು ಓದಿ ಆ ಲೇಖನ ನೂರಾರು ಜನರಿಗೆ ಪಾರ್ವರ್ಡ್ ಮಾಡಿ ಓದಿಸಿ ಬಹಳಷ್ಟು ಚರ್ಚೆಯಾಗುವಂತೆ ಮಾಡಿದರು.
ಕಾವ್ಯ, ಸಂಪಾದನೆ, ಸಂಶೋಧನೆ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಅಮೂಲ್ಯ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಸಾಹಿತ್ಯ, ಶರಣ ಸಾಹಿತ್ಯದ ಹಲವಾರು ಸಂಘಟನಾತ್ಮಕ, ರಚನಾತ್ಮಕ ಚಟುವಟಿಕೆಗಳಲ್ಲಿ ತುಂಬಾ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಿದ್ದರು. ನೇರ ನಡೆ ನುಡಿಯ, ಸೂಕ್ಷ್ಮ ಸಂವೇದನೆಯ ಮಕ್ತಮನಸ್ಸಿನ ಸಾಹಿತಿ, ಚಿಂತಕ, ಪ್ರಾದ್ಯಾಪಕರಾಗಿದ್ದ ಡಾ. ಈಶ್ವರಯ್ಯ ಮಠ ಅವರು ಉತ್ತಮ ವಾಗ್ಮಿ.
ಕಲ್ಬುರ್ಗಿಯ ವಿ.ಜಿ. ಮಹಿಳಾ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ನಡೆಯುವ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಒಳ್ಳೆಯ ಸಾಂಸ್ಕೃತಿಕ ಮನಸ್ಸಿನವರಾಗಿದ್ದರು.
ಕನ್ನಡ ವಿಭಾಗದ ಚಿಂತನಾಶೀಲ ಪ್ರಾದ್ಯಾಪಕರಾಗಿ, ವಿದ್ವಾಂಸರಾಗಿ ಅಪಾರ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ, ಗೌರವಗಳಿಗೆ ಪಾತ್ರರಾಗಿದ್ದರು. ನನ್ನಂತಹ ಅನೇಕ ಯುವ ಬರಹಗಾರರ ಬರಹಗಳನ್ನು ಓದಿ ಪ್ರೋತ್ಸಾಹ ನೀಡುತ್ತ ಬೆಳೆಸಿದ ಸಹೃದಯಿಗಳು.
ಈ ಅಕ್ಷರಗಳ ನಮನ ಸಲ್ಲಿಸುತ್ತ ವಿನಯವಾಣಿ ಬಳಗದಿಂದ ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ.
–ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ.